ಮಂಗಳವಾರ, ಜನವರಿ 20, 2009

ಮಾಗಿ ಚಳಿಗೆ ಮೈಯೊಡ್ಡಿ

ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ 'ಮಡಿವಂತ' ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.


ಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.


ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.

ಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು.

ಬಾನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ.

ಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ.

ಹೀಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ 'ಅಪ್ಪಿಕೋ' ಚಳುವಳಿಗೆ ಮೀಸಲು.! ಮದುವೆಯಾಗದವರು 'ಒಂದು ಚಳಿಗಾಲ ವ್ಯರ್ಥವಾಯಿತಲ್ಲ' ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ!

ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ!

[ಟಿಪ್ಪಣಿ:ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ.
ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ 'ಪೇಷೆಂಟ್' ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.]


ಚಿತ್ರ ಕೃಪೆ: ಇಂಟರ್ನೆಟ್



ಶನಿವಾರ, ಜನವರಿ 3, 2009

"ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವು

ದು "ಮಾಲ್"ಗಳ ರೇಸಿನಲ್ಲಿ ಮುಂಚೂಣಿಯಲ್ಲಿರುವ "ದೊಡ್ಡ"ಬಜಾರು. ದಸರಾ ಸಮಯದಲ್ಲಿ ಅರಮನೆ ನಗರಿಯಲ್ಲಿಯೂ ತನ್ನ ಖಾತೆ ತೆರೆದು ದೊಡ್ಡ ಮಟ್ಟದಲ್ಲೇ ಜನರನ್ನು ಸೆಳೆಯತೊಡಗಿತು. ಅದು ಆರಂಭವಾಗುವ ಮೊದಲೇ "ಹಾಗಂತೆ, ಹೀಗಂತೆ" ಎಂಬ ಅಂತೆ - ಕಂತೆಗಳ ಸಾಲು ಸಂತೆಯೇ ಹುಟ್ಟಿಕೊಂಡಿತ್ತು.

ದೀಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು.

ಅಂತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ!

ಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು

ಧರಿಸಿ ಕನ್ನಡಿ ನೋಡಿದರೆ ನಾವೇ ಒಂದು ನಡೆದಾಡುವ ಫ್ಯಾನ್ಸಿಸ್ಟೋರಿನಂತೆ ಕಾಣುತ್ತಿದ್ದೆವು! ಇನ್ನು ಕೆಲವು ಶರಟುಗಳ ಮೇಲೆ ಎ ಬಿ ಸಿ ಡಿ ಆದಿಯಾಗಿ ಎಲ್ಲ ಲಿಪಿಗಳೂ ಇದ್ದವು.

ಹೀಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು.

ಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು.

ಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು.



ಚಿತ್ರ ಕೃಪೆ: ಇಂಟರ್ನೆಟ್

ಸೋಮವಾರ, ಡಿಸೆಂಬರ್ 15, 2008

ಹೀಗೊಂದು ಕಥಾ ಕಾಲಕ್ಷೇಪ

ಜನ - ಜಾತ್ರೆ

ದೊಂದು ಪ್ರಸಿದ್ಧ ಯಾತ್ರಾ ಕ್ಷೇತ್ರ. ಅಲ್ಲಿನ ಹಳೇ ಕಾಲದ ದೇಗುಲಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಹಾಗಾಗಿಯೇ ದೇಗುಲದ ಸುತ್ತಮುತ್ತಲಿದ್ದ ಅಂಗಡಿಯವರು, ಬೀದಿ ವ್ಯಾಪಾರಿಗಳು ತುಸು ಕಾಸು ಕಾಣುವಂತಾಗಿದ್ದರು. ಜಾತ್ರೆ, ಉತ್ಸವಗಳ ಸಮಯದಲ್ಲಿ ಪ್ರವಾಸಿಗರು ಹೆಚ್ಚಿರುತ್ತಿದ್ದುದರಿಂದ ವ್ಯಾಪಾರಿಗಳಿಗೂ ಅದು ಸುಗ್ಗಿ ಕಾಲ.

ಹುಡುಗ ನಿತ್ಯ ಅದೇ ಬೀದಿಯಲ್ಲಿ ನಿಂತು ಮಿರಮಿರನೆ ಹೊಳೆಯುವ ರೇಡಿಯಂ ಬಾಲುಗಳನ್ನು ಮಾರುತ್ತಿದ್ದ. 'ಅದೇನು ಈ ವಯಸ್ಸಿನಲ್ಲಿ ದುಡಿಮೆಯೇ!?' ಎಂದು ನೀವಂದುಕೊಳ್ಳಬಹುದು. ವಾಸ್ತವದ ನೆಲೆಯಲ್ಲಿ ನೋಡುವುದಾದರೆ; ಚಿಕ್ಕಾಸು ದುಡಿಯದೆ ಕುಡಿದು ಕುಡಿದೇ ಸತ್ತುಹೋದ ತಂದೆ, ವೃದ್ಧ ತಾಯಿ, ಸಣ್ಣ ತಂಗಿಯರು - ಇವೆಲ್ಲ ಅವನ ಬಾಲ್ಯವೆಂಬ ಬಣ್ಣದ ಪೆಟ್ಟಿಗೆಗೆ ಬೀಗ ಜಡಿದು ಬದುಕಿನ ಭಾರಕ್ಕೆ ಅವನನ್ನು ನೊಗವಾಗಿಸಿದ್ದವು. ಅತೀತಕ್ಕೆ ಆತು ಹೇಳುವುದಾದರೆ; ಅವನ ಪೂರ್ವಾರ್ಜಿತ ಕರ್ಮ ಅವನನ್ನು ಈ ಸ್ಥಿತಿಗೆ ತಂದಿತ್ತು.


ಸ್ಥಿತಿಯ ಬಗ್ಗೆ ಅವನಿಗೆ ಕೊರಗು, ಸ್ವಾನುಕಂಪಗಳಿರಲಿಲ್ಲ! ಸದಾ ನಗು ಸೂಸುವ ಮುದ್ದು ಮುಖ, ಗುಳಿ ಬೀಳುವ ಕೆನ್ನೆಗಳು, ಗಿರಾಕಿಗಳೊಂದಿಗೂ ಹಸನ್ಮುಖಿಯಾಗಿಯೇ ವ್ಯವಹರಿಸುತ್ತಿದ್ದ. ಬಂದ ಹಣವನ್ನು ಮಾಲೀಕನಿಗೆ ನೀಡಿ, ತನ್ನ ಕಮೀಷನ್ ಪಡೆದು ತೃಪ್ತಿಯಿಂದ ಮನೆಗೆ ತೆರಳುತ್ತಿದ್ದ.


ಅಂದು ದೇಗುಲದಲ್ಲಿ ಜಾತ್ರೆ. ಹುಡುಗನಿಗೂ ವ್ಯಾಪಾರ ಜೋರಾಗಿಯೇ ಇತ್ತು. ಸಂಜೆಯಾಗುತ್ತಿದ್ದಂತೆ ಉಕ್ಕಿ ಬರತೊಡಗಿದ ಜನಪ್ರವಾಹದಿಂದ ಜಾತ್ರೆ ರಂಗೇರತೊಡಗಿತು. ಹುಡುಗನೂ ತನ್ನಲ್ಲುಳಿದಿದ್ದ ಕೆಲವೇ ಬಾಲುಗಳನ್ನು ಮಾರಿ ಮನೆಗೆ ತೆರಳಲು ಉತ್ಸುಕನಾಗಿದ್ದ. ಆಗಲೇ ಜಾತ್ರೆಯುದ್ದಕ್ಕೂ ಹಾವಳಿಯಿಡುತ್ತಿದ್ದ ಐದಾರು ಯುವಕರ ಗುಂಪೊಂದು ಹುಡುಗನ ಸುತ್ತ ಜಮಾಯಿಸಿತು. ಅವರಲ್ಲೊಬ್ಬ ಬಾಲ್ ತೆಗೆದುಕೊಂಡು ಖರೀದಿಸುವವನಂತೆ ಪರೀಕ್ಷಿಸುತ್ತ ಬೆಲೆ ವಿಚಾರಿಸತೊಡಗಿದ. ಮುಂದಿನ ಕೆಲ ಕ್ಷಣಗಳಲ್ಲೇ ಬಾಲ್ ತೆಗೆದುಕೊಳ್ಳುವ ಕೈಗಳು ಎರಡರಿಂದ ನಾಲ್ಕಾದವು. ನಾಲ್ಕರಿಂದ ಎಂಟಾದವು. ನೋಡ ನೋಡುವಷ್ಟರಲ್ಲಿ ಹುಡುಗನ ಬಳಿ ಬೆರಳೆಣಿಕೆಯಷ್ಟು ಬಾಲ್ ಮಾತ್ರ ಉಳಿದವು. ಎರಡು ಬಾಲುಗಳನ್ನು ಮಾತ್ರ ಹಿಂದಿರುಗಿಸಿದ ಆ ಗುಂಪು ಜನಸಾಗರದ ನಡುವೆ ಕರಗಿಹೋಯಿತು. ಆ ಪುಂಡರ ಕೈ ಚಳಕ(?)ದ ಮುಂದೆ ಹುಡುಗನ ಹದ್ದಿನಕಣ್ಣುಗಳು ಸೋತವು. ' ಏ ಬಾಲ್ ದೇ ಭಾಯ್' ಎಂಬ ಹುಡುಗನ ಧ್ವನಿ ಜಾತ್ರೆಯ ಗೌಜಿನಲ್ಲಿ ಲೀನವಾಯಿತು.

ಷ್ಟು ದೊಡ್ಡ ಜನ ಜಾತ್ರೆಯಲ್ಲಿಯೂ ತನಗೆ ನೆರವಾಗಬಲ್ಲ ಜೀವವೊಂದು ಇರದಿದ್ದಕ್ಕೆ ಹುಡುಗನ ಹೃದಯ ಪ್ರವಾಹಕ್ಕೆ ಸಿಕ್ಕ ನಾವೆಯಂತೆ ತತ್ತರಿಸಿತು. ಸೋತ ಕಣ್ಣುಗಳಿಂದ ಹೊರಟ ಅಶ್ರುಧಾರೆಗಳು ಕೆನ್ನೆಯ ಗುಳಿಯಲ್ಲಿ ಇಂಗಿ ಇಲ್ಲವಾದವು.

ರುದಿನ: ಜಾತ್ರೆಯ ತೇರು, ಜೋರುಗಳೆಲ್ಲ ಮುಗಿದು ನೆರೆ ಇಳಿದ ನದಿಯಂತೆ ಸ್ತಬ್ಧವಾಗಿತ್ತು ಆ ಪ್ರದೇಶ. ಮುನ್ನಾದಿನ ಜನ ಪ್ರವಾಹವೆಸಗಿದ ಹಾನಿಯನ್ನೆಲ್ಲ ಬಳಿದು, ಆವರಣವನ್ನು 'ಸ್ವಚ್ಛ'ವಾಗಿಡುವ ಯತ್ನದಲ್ಲಿದ್ದರು ಪುರಸಭೆಯವರು. ಆ ಹುಡುಗನ ಜಾಗದಲ್ಲಿ ತರುಣನೊಬ್ಬ ನಿಂತು ಹೂವು ಮಾರುತ್ತಿದ್ದ.

ಫೋಟೊ ಕೃಪೆ: ಇಂಟರ್ನೆಟ್




ಮಂಗಳವಾರ, ಡಿಸೆಂಬರ್ 9, 2008

ಕ್ವಾಟ್ಲೆ ಕೊತ್ವಾಲ್ ಎಂಬ ಹೊಸ ರಾಗ

ಸುಮ್ಮನೆ ಹರಟೆ ಕೊಚ್ಚುತ್ತ ಕುಳಿತಾಗ ಹೊಕ್ಕ ಹುಳ ಈ ಕ್ವಾಟ್ಲೆ ಕೊತ್ವಾಲ್'. ಇದು ಕೇವಲ ಕ್ವಾಟ್ಲೆ(ತಮಾಷೆ)ಗಾಗಿ. ಇದರ ಹಿಂದೆ ಯಾರನ್ನೂ ಚುಚ್ಚುವ, ಅಪಹಾಸ್ಯ ಮಾಡುವ ಉದ್ದೇಶವಿಲ್ಲ.
ನಿಮಗೆ ಇಷ್ಟವಾಯಿತಾದರೆ ಕೊತ್ವಾಲ್ ಆಗಾಗ ಕಾಣಿಸಿಕೊಳ್ಳಲಿದ್ದಾನೆ.


ಪಾತ್ರ ಪರಿಚಯ: ಕೊತ್ವಾಲ್- ಒಬ್ಬ ಸುದ್ದಿ ಪ್ರಿಯ. ತನ್ನ ಶಿಷ್ಯನ ಮೂಲಕ ಊರ, ಪರಊರ ಸುದ್ದಿ ತಿಳಿಯುವುದು ಇವನ ಪ್ರಿಯವಾದ ಹವ್ಯಾಸ.
ಕಿಳ್ಳೇಕ್ಯಾತ:- ಕೊತ್ವಾಲನ ಶಿಷ್ಯ. ವಿಷಯ ಸಂಗ್ರಹಣೆಯಲ್ಲಿ ನಿಪುಣ.

ಯಾವತ್ತಿನಂತೆ ತನ್ನ ಆಸನದಲ್ಲಿ ವಿರಾಜಮಾನನಾದ ಕ್ವಾಟ್ಲೆ ಕ್ವತ್ವಾಲ್ ತನ್ನ ಶಿಷ್ಯ ಕಿಳ್ಳೇಕ್ಯಾತನ ಪ್ರತೀಕ್ಷೆಯಲ್ಲಿ ತೊಡಗಿದ. ಯಾವತ್ತೂ ತಾನು ಆಸೀನನಾಗುತ್ತಿದ್ದಂತೆ ಎದುರಿಗೆ ವಕ್ಕರಿಸುತ್ತಿದ್ದ ಶಿಷ್ಯೋತ್ತಮ ಇಂದು ಕಾಣದಿದ್ದಾಗ 'ಬಡ್ಡೇತದು ಊರ ಸುದ್ದಿ ತಿಳ್ಕಂಡು ಬಾರ್ಲಾ ಅಂತ ಕಳಿಸಿದ್ದರೆ ಎಲ್ಲಿ ಹಕ್ಕಲು ಪಟ್ಟಾಂಗ ಮಾಡುತ್ತ ಕುಳೀತಿದೆಯೋ' ಎಂದು ಗೊಣಗಿಕೊಂಡ.!
ಅಷ್ಟರಲ್ಲೇ "ಬಂದು ಬಾಳಾ ಹೊತ್ತಾತಾ ಗುರುಗ್ಳೇ...?" ಎನ್ನುತ್ತ ಕಿಳ್ಳೆಕ್ಯಾತ ಕೊತ್ವಾಲನ ಮುಂದೆ ಪ್ರತ್ಯಕ್ಷನಾದ.

ಎಲ್ಲಾ ಫಾರ್ಮಾಲಿಟೀಸ್ ಬದಿಗಿಟ್ಟು ಕೊತ್ವಾಲ ಕಿಳ್ಳೇಕ್ಯಾತನ ಬೀಟ್ ಡೈರಿಯ ಪರಿಶೀಲನೆಗೆ ಮುಂದಾದ.
"ಏನ್ಲಾ, ಪದ್ಮನಾಭ ಪುರದ ಪವರ್ ಹೌಸ್ ಕಡಿಗೆ ಹೋಗಿ "ದೊಡ್ಡವ್ರು" ಸೆಂದಾಕ್ಕವ್ರಾ ವಿಚಾರಿಸ್ಕಂಡ್ ಬಾ ಅಂದಿದ್ದೆ. ಹೋಗಿದ್ದೇನ್ಲಾ?"

ಕಿ.ಕ್ಯಾ. ತಕ್ಷಣವೇ ತನ್ನ ಬೀಟ್ ಪ್ರವರ ಒಪ್ಪಿಸತೊಡಗಿದ: "ಹೂಂ ಗುರುಗ್ಳೇ ಹೋಗಿದ್ದೆ. ಆದ್ರೆ ದೊಡ್ಡವ್ರು ಮನ್ಯಾಗೆ ಇರ್ನಿಲ್ಲ. ಅದೆ ಮೊನ್ನೆ ನಡೆದ ರಾಲಿನಾಗೆ ತುತ್ತೂರಿ ಊದಾವ ಅಂತ ಇದ್ದಬದ್ದ ಉಸರೆಲ್ಲಾ ಹಾಕಿ ಪುಸುಗುಟ್ಟಿದ್ರೂ ತುತ್ತೂರಿ ಸ್ವರ ಹೊರ್ಟಿರ್ಲಿಲ್ವಲ್ಲ , ಅದ್ಕೆ ಶಾನೆ ಬೇಜಾರ್ ಮಾಡ್ಕಂಡು ಯಾವ್ದಾರೂ ರಾಹು ಕೇತು ವಕ್ಕರಿಸಿಕೊಂಡವ್ರಾ? ಉಪ ಚುನಾವಣೇ ಬೇರೆ ಬಂತು. ಕೇಳ್ಕಂಬತ್ತೀನಿ ಅಂತ ದೇವರ ನಾಡು(God's Own country) ಕಡೆ ಹೋಗವ್ರಂತೆ. ವಾಪಸ್ ಬರಾದು ಮುಂದಿನ್ ಅಮಾಸೆ ಕಳೆದ ಮ್ಯಾಕಂತೆ.!"

"ಹೌದಾ? ನಮ್ ಸುಬ್ರಹ್ಮಣ್ಯಸ್ವಾಮಿಗಳಾದ್ರೂ ಸಿಕ್ಕಿದ್ರಾ?"
ಕಿ.ಕ್ಯಾ.:"ಸಿಕ್ಕಿದ್ರು. ಆದ್ರೆ ಅವರೂ ಡಲ್ಲಾಗಿದ್ರು. ಮಾತಾಡ ಮೂಡ್ನಾಗೆ ಇರ್ನಿಲ್ಲ.!"
"ಅದ್ಯಾಕ್ಲಾ? ಮೊನ್ನೆ ಗಂಟ ಗುಂಡ್ಕಲ್ ಇದ್ದಂಗೆ ಇದ್ರಲ್ಲ! ಈಗೇನಾತ್ಲಾ?"
" ಯಾವ್ದೊ ಭಾಸಣದಾಗೆ 'ನಾನು ಇನ್ಮುಂದೆ ಪಂಚೆ ಉಟ್ಕಂಡೇ ಓಡಾಡ್ತೀನಿ' ಅಂತ ಹೇಳಿದ್ದಕ್ಕೆ ಯಾರೋ ಕರೆಂಟ್ ಕೊಟ್ಟಂಗೆ ಕಮೆಂಟ್ ಮಾಡವ್ರಂತಲ್ಲಾ!?"
"ಯಾರ್ಲಾ ಅದು ಅಂಥಾ ಗಂಡು!?"
"ಅವರಾ ಹೆಸ್ರು "ಪುಟ್ಟ"ದಾಗಿದ್ರೂ ಕ್ಯಾರೆಕ್ಟರು ಫವರ್ಫುಲ್ ಆಗಿರೋ "ಅಣ್ಣಯ್ಯ" ಒಬ್ರು ಅವ್ರಂತಲ್ಲ! ಅವರೇ ಈ ಕ(ರೆ)ಮೆಂಟ್ ಕೊಟ್ಟೋರು. ಅವರು 'ಸ್ವಾಮಿಯವರು ನಿಜವಾದ ಮಣ್ಣಿನ ಮೊಮ್ಮಗನೇ ಆಗಿದ್ರೆ ಚಡ್ಡಿ ಹಾಕ್ಕಂಡು ತಿರುಗಾಡ್ಲಿ. ನಾನು ಒಪ್ಕತೀನಿ......' ಅಂತೆಲ್ಲಾ ಹೇಳಿದ್ರಂತೆ. ಅದ್ಕೆ ಇವ್ರು ವರ್ಸಾನುದಿನ ತೊಳೆಯದ ಪಂಚೆ ಥರ ಮುಖ ಮಾಡ್ಕಂಡು ಕುಂತ್ಕಂಡಿದ್ರು!"

"ಹೋಗ್ಲಿ. ನಮ್ಮ ಚಿಕ್ಕತಮ್ಮಯ್ಯ ಆದ್ರೂ ಸಿಕ್ಕುದ್ರಾ?"
"ಇಲ್ಲ.! ಅಣ್ಣ ಸ್ವಾಮಿ ಆ ಪರಿ ಬೇಜಾರು ಮಾಡ್ಕಂಡಿರಾದು ನೋಡಿ 'ಹೋಗ್ಲಿ ಅತ್ಲಾಗೆ ಒಂದು ಪಟ್ಟಾಪಟ್ಟಿ ಚಡ್ಡೀನಾರ ತಂದುಕೊಡಾವ ಅಂತ ಜವಳಿ ಸಾಪ್ ಕಡೆ ಹೋಗಿದ್ರಂತೆ.! ಅಣ್ಣದೇವರ ಸೈಜಿನ್ ಚಡ್ಡಿ ಎಲ್ಲೂ ಸಿಗಾಕಿಲ್ಲ ಅಂತಂದಾಗ ಯಾವದಾರ ಸಾಮಿಯಾನ ಕಂಪ್ನಿಗೆ ಹೋಗಿ ಒಂದಷ್ಟು ಬಟ್ಟೆ ತತ್ತೀನಿ. ಫ್ರೀ ಸೈಜಿಂದು ಹೊಲಿಸಿದ್ರಾತು ಅಂತ ಸಾಮಿಯಾನ ಫ್ಯಾಕ್ಟರಿ ಹುಡಿಕ್ಕಂಡು ಹೋಗವ್ರಂತೆ!"
"ಅಯ್ಯೋ ಪಾಪ..! ಇತ್ತಾಗೆ ನಮ್ಮ ಹೈಕೋರ್ಟ್ ಎದುರಿಂದ ಏನಾರ ಸುದ್ದಿ ಐತಾ?"
"ಇಸೇಸ ಸುದ್ದಿ ಏನಿಲ್ಲ. ಈ ತಿಂಗ್ಳ 13ಕ್ಕೆ ನಮ್ ಕಲಾಂ ಸಾರು ಏನೋ 'ಕ್ಲಾಸ್ ತಗತ್ತೀನಿ ರೆಡಿಯಾಗಿರಿ" ಅಂದವ್ರಂತಲ್ಲ. ಅದ್ಕೆ ತಯಾರಾಗೋದ್ರಾಗೆ ಬಿಜಿಯಾಗವ್ರೆ ಎಲ್ಲ.!"

"ಬೆಂದಕಾಳೂರಿಂದು ಈ ಕಥೆನಾ?" ಇನ್ನು ನಮ್ ಮಹಿಷಪುರ ಕತೆ ಏನಪ?"
"ಅಯ್ಯೋ ಇಲ್ಲಿದೇನು ಬುಡಿ ಸಿವಾ! ಉಸ್ತುವಾರಿ ನೋಡೋ 'ಅಕ್ಕೋರು' ದಸರಾನ 'ಶೋಭಾ'ಯಮಾನವಾಗಿ ಮಾಡಿ ಮುಗ್ಸುದ್ದು ನೋಡಿ 'ಅಪ್ಪೋರು' ದಿಲ್ ಕುಸ್ ಆಗವ್ರಂತೆ. ಅದ್ನ ಕಂಡು ಖುಸಿಯಾದ ಅಕ್ಕೋರು 'ಮುಂದಿನ ದಸರಾಗೆ ಈಗ್ಲಿಂದೆ ತಯಾರಿ ಸುರುಹಚ್ಕಳಿ' ಅಂತ ಅಧಿಕಾರಿಗುಳೀಗೆ ಏಳಿ ತಮ್ಮ ಗೂಟದ ಕಾರು ಹತ್ತಿ ಹೋದವ್ರು ಇನ್ನೂ ಇತ್ತಾ ಕಡೆ ಮುಖ ಮಾಡಿಲ್ವಂತೆ. ಇತ್ತಾಗೆ ರಂಗಾಯಣದಾಗೆ ಬಹುರೂಪಿ ನಾಟಕೋತ್ಸವ ಬಂತಲ್ಲ, ಅದ್ಕೆ ನಮ್ಮ ಖ್ಯಾ(ತೆ)ತ ಇಮರ್ಸಕರೆಲ್ಲ ಹೊಸ ಪೆನ್ನು ತಗಂಡು, ಜುಬ್ಬ ಪೈಜಾಮ ತೊಳ್ಕೊಂಡು, ಫ್ರೆಂಚ್ ಗಡ್ಡ ಟ್ರಿಮ್ ಮಾಡ್ಕಂಡು ತಯಾರಾಗ್ತವ್ರೆ! ಈ ಸರ್ತಿ 'ಬಹುರೂಪಿ'ಲಿ ಏನ್ ಕುರೂಪ ಹುಡುಕ್ಲಿ ಅಂತ ಕನ್ನಡ್ಕ ಒರೆಸ್ಕೊಂಡು ಕುಂತವ್ರೆ!"

"ಹೌದಾ. ಸರಿಕಣ್ ಬುಡು. ಬಹುರೂಪಿ ಟೇಮಿನಾಗೆ ಇತ್ಲಾಗೆ ಚೂರು ಗ್ಯಾನ ಮಡುಗು. ಬರೀ ಬೆಂದಕಾಳೂರ್ನಾಗೇ ಕಾಲ ಕಳಿತ ಕೂರ್ಬೇಡ" ಎಂದ ಕೊತ್ವಾಲ ಹೊರಡಲನುವಾದ.
ಅದನ್ನು ಕಂಡ ಕಿ.ಕ್ಯಾ. ಮಾಮೂಲಿಗಾಗಿ ಕೈಯೊಡ್ಡಿ ಹಲ್ಲುಗಿಂಜಿದ. "ಥೂ ಬಡ್ಡೇತದೆ. ಈ ಚಿಲ್ರೆ ಬುದ್ಧಿ ಬುಡಾಕಿಲ್ವಲ ನೀನು" ಎಂದು ಹತ್ತು ರೂನ ನೋಟನ್ನು ನೀಡುತ್ತಿದ್ದಂತೆ ಕ್ಷಣಾರ್ಧದಲ್ಲಿ ಮಾಯವಾದ.

ಬುಧವಾರ, ಡಿಸೆಂಬರ್ 3, 2008

ಬ್ಲಾಗಿಗ 'ಹಳಿ' ತಪ್ಪಿದ ಕಥೆ

ತ ನನ್ನ ಮಿತ್ರರಲ್ಲೊಬ್ಬ. ಆಗಾಗ ಅಂತಜಾ೵ಲದಲ್ಲಿ ಬ್ಲಾಗ್ ಬರೆಯುವ ಕಾರಣ ಮಿತ್ರ ವಲಯದಲ್ಲಿ ಆತ 'ಬ್ಲಾಗಿಗ' ಎಂದೇ ಬಿರುದಾಂಕಿತ. ಆತನಿಗೊಮ್ಮೆ ಮೈಸೂರಿಗೆ ಬರುವ ಕೆಲಸವಿತ್ತು. ಅವನು ಆಗಷ್ಟೇ ಕೆಲಸಕ್ಕೆ ಸೇರಿದ್ದನಾದ್ದರಿಂದ ಜೇಬಿಗೂ ಸ್ವಲ್ಪ ಭಾರವಾಗದಿರಲೆಂದು ರೈಲಿಗೇ ಬರುವಂತೆ ಹೇಳಿ, ರೈಲುಗಳ ವೇಳಾಪಟ್ಟಿಯನ್ನೆಲ್ಲ ಎಸ್ಸೆಮ್ಮೆಸ್ ಕಳಿಸಿದ್ದೆ.

ರುದಿನ ಬೆಳಿಗ್ಗೆ 7.30ರ ರೈಲಿಗೆ ಹೊರಟಿದ್ದೇನೆಂದು ಆತ ಮೆಸೇಜ್ ಕಳುಹಿಸಿದ. ಹನ್ನೊಂದು ಗಂಟೆ ಸುಮಾರಿಗೆ ಬರಬಹುದೆಂದು ಆತನಿಗಾಗಿ ಕಾಯುತ್ತಿದ್ದೆ. ಅಷ್ಟರಲ್ಲೇ 'ಮೈಸೂರಿಗೆ ಬರುವಾಗ 'ಬಂಗಾರಪೇಟೆ' ಅಂತ ಊರು ಸಿಗುತ್ತಾ?' ಎಂಬ ಪ್ರಶ್ನೆ ಹೊತ್ತ ಆತನ ಎಸ್ಸೆಮ್ಮೆಸ್ ಬಂತು. ಮಹಾಶಯ ಹಳಿತಪ್ಪಿದ್ದಾನೆಂದು ತಕ್ಷಣ ಅರಿವಾಯಿತು. ರೈಲುಗಳ ಸಮಯವನ್ನು ಸರಿಯಾಗಿ ಕಳಿಸಿದ್ದರೂ ಟಿಕೆಟ್ ನೀಡುವಾತ ಹೇಳಿದ ಪ್ಲಾಟ್ ಫಾಮ್೵ ಸಂಖ್ಯೆಯನ್ನೇ ನೆಚ್ಚಿಕೊಂಡು ರೈಲಿನ ಬೋಡ್೵ ಕೂಡ ನೋಡದೆ ಹತ್ತಿ ಕುಳಿತಿದ್ದ ಪುಣ್ಯಾತ್ಮ!

ಒಂದೆಡೆ ಸೀಟು ಸಿಗುತ್ತಿದ್ದಂತೆ ಭೈರಪ್ಪನವರ 'ಅನ್ವೇಷಣ'ದಲ್ಲಿ ಮುಳುಗಿದ್ದವನಿಗೆ ಗಂಟೆ ಹನ್ನೊಂದಾದರೂ ರೈಲು ಮೈಸೂರು ತಲುಪದಿದ್ದಾಗ ತಟ್ಟನೆ ಜ್ಞಾನೋದಯ(!) ವಾಗಿ 'ರೈಲು ಎಲ್ಲೆಲ್ಲೋ ಹೋಗ್ತಿದೆ ಮಾರಾಯ!' ಎಂದು ಗೊಣಗಿಕೊಂಡು ಮತ್ತೊಂದು ಮೆಸೇಜ್ ಬಿಟ್ಟ. ಎಲ್ಲೋ ಎಸೆದಿದ್ದ ರೈಲು ವೇಳಾಪಟ್ಟಿಯನ್ನು ಪುನಃ ಹುಡುಕಿ ಮೆಸೇಜ್ ಕಳೀಸಬೇಕಾದ ಕಮ೵ ನನ್ನದಾಯಿತು. ಅದೇ ಸಮಯಕ್ಕೆ ಅವನ ಮೊಬೈಲ್ ಕರೆನ್ಸಿಯೂ ಖಾಲಿಯಾಗಿದ್ದರಿಂದ ಅದರ ರಿಚಾಜ್೵ ಹೊಣೆಯೂ ನನ್ನ ಹೆಗಲಿಗೇ ಬಿತ್ತು!

ತ ಬಂಗಾರಪೇಟೆಯಿಂದ ಬೆಂಗಳೂರಿಗೆ ಮರಳಿ ಬಂದು ಮೈಸೂರಿನ ರೈಲು ಹತ್ತುವವರೆಗೂ ಜೀವ ಎಡಗೈಲಿ ಹಿಡಿದುಕೊಂಡಂತಾಗಿತ್ತು ನನ್ನ ಸ್ಥಿತಿ. ಪ್ರಯಾಣದುದ್ದಕ್ಕೂ ಭೂಪ ಗಡದ್ದಾಗಿ ನಿದ್ದೆ ತೆಗೆಯುತ್ತಿದ್ದರೆ, ಪುಕ್ಕಟೆ ಪರೋಪಕಾರಿಯಾಗಲು ಹೊರಟ ನಾನು ಆತ ಮತ್ತೆಲ್ಲೋ ಕಾಣೆಯಾದರೆ ಗತಿಯೇನೆಂಬ ಆತಂಕದಲ್ಲಿದ್ದೆ. (ಅವ ಅಪ್ಪ-ಅಮ್ಮರಿಗೆ ಒಬ್ಬನೇ ಮಗ ಬೇರೆ!)

ಷ್ಟೆಲ್ಲ ಆಗುವಷ್ಟರಲ್ಲಿ ಈತ ಹಳಿ ತಪ್ಪಿದ ಸುದ್ದಿ ಅವನ ಸಹೋದ್ಯೋಗಿಯೊಬ್ಬರಿಗೆ ಗೊತ್ತಾಗಿ ವೃತ್ತಿಬಾಂಧವರ ನಡುವೆಯೆಲ್ಲಾ ಅದು ಪ್ರಚಾರವಾಗಿಬಿಟ್ಟಿತ್ತು. ಅವರೆಲ್ಲ ಫೋನಿನಲ್ಲೇ ಇವನನ್ನು ಒಂದು ಸುತ್ತು ಕಿಚಾಯಿಸಿ ಮಜ ತೆಗೆದುಕೊಂಡಿದ್ದರು. ರೈಲನ್ನೂ , ವೃತ್ತಿಬಾಂಧವರನ್ನೂ ದೂವಾ೵ಸ ಮುನಿಯಂತೆ ಶಪಿಸುತ್ತ ಸಂಜೆ ವೇಳೆಗೆ ಮಿತ್ರ ಮೈಸೂರು ತಲುಪಿದ. ಈ ನಡುವೆ ಆ ಮಹಾಶಯನನ್ನು ಹಳಿ ಹತ್ತಿಸುವಷ್ಟರಲ್ಲಿ ನಾನು ಹೈರಾಣಾದದ್ದು ಮಾತ್ರ ಯಾರ ಗಮನಕ್ಕೂ ಬರಲಿಲ್ಲ!

ಶುಕ್ರವಾರ, ಅಕ್ಟೋಬರ್ 31, 2008

ಹೀಗೊಂದು ಪಾರ್ಕು ಪುರಾಣವು

ದು ಕಾಂಕ್ರೀಟ್ ಕಾಡಿನ ಮಧ್ಯದಲ್ಲಿರುವ ಕೃತಕ ಕಾಡು. ಅರ್ಥಾತ್ ಅದೊಂದು ಪಾರ್ಕು. ಹೆಸರಿಗೆ ಪ್ರಕೃತಿಯ ಪ್ರತಿರೂಪವೆಂಬ ಹೆಗ್ಗಳಿಕೆ; ಒಳಗೆಲ್ಲಾ ಕೃತಕತೆಯ ಹೊದಿಕೆ! ಅಲ್ಲಿನ ಯಾವ ಮರ ಗಿಡಗಳಿಗೂ ತಮ್ಮಿಚ್ಚೆಯಂತೆ ಕುಡಿಯೊಡೆದು ಹಬ್ಬುವ ಭಾಗ್ಯವಿಲ್ಲ. ಮಾಲಿಯ ಮನದಿಚ್ಚೆಯಂತೆ ಅವುಗಳ ಕೊನರು.

ಚುಮುಚುಮು ಇಬ್ಬನಿಯಲ್ಲಿ ತೋಯ್ದ ಪಾರ್ಕಿನ ಹುಲ್ಲುಹಾಸು ರವಿರಶ್ಮಿಗೆ ಮೈಯೊಡ್ಡಿ ಪುಳಕಗೊಳ್ಳಬೇಕೆನ್ನುವಷ್ಟರಲ್ಲೇ ಉಂಡು ಉಂಡೂ ಗುಂಡಗಾದ ಗುಂಡೋದರ ಲೆಫ್ಟ್ ರೈಟ್ ಮಾಡುವ ಕಾಲುಗಳಡಿಯಲ್ಲಿ ಸಿಕ್ಕಿ ಅಪ್ಪಚ್ಚಿಯಾಗುತ್ತದೆ. ಗಂಟೆ ಹತ್ತಾಗುತ್ತಿದ್ದಂತೆ ಪಾರ್ಕಿಗೆ ಪ್ರೇಮಿಗಳ ಆಗಮನವಾಗುತ್ತದೆ. ಪಾರ್ಕಿನ ತರುಲತೆಗಳೆಲ್ಲ ಜೋಡಿಹಕ್ಕಿಗಳ ಪಿಸುಮಾತಿಗೆ ಸಾಕ್ಷಿಯಾಗುತ್ತವೆ. ಪ್ರೇಮ ಸಾಮ್ರಾಜ್ಯ ಕಟ್ಟುವ ಕಾತುರದಲ್ಲಿರುವ ಅವರಿಗೆ ಅಲ್ಲಿ ಹೂ ಬಿಟ್ಟು ನಳನಳಿಸುವ ಗಿಡಗಳ ಮೈದಡವಲೂ ಸಮಯವಿರುವುದಿಲ್ಲ!ನಾಲ್ಕು ಗಂಟೆ ಸಮೀಪಿಸುತ್ತಿದ್ದಂತೆ ವೃದ್ಧರು, ಗೃಹಿಣಿಯರು ತಮ್ಮ ದಿನದ 'ಧುಮುಧುಮು' ಪರಿಹರಿಸಿಕೊಳ್ಳುವ ದೃಷ್ಯ ಸರ್ವೆ ಸಾಮಾನ್ಯ. ಅವರುಗಳ ದುಃಖ ದುಮ್ಮಾನಗಳಿಗೆ ಅಲ್ಲಿರುವ ಮರಗಿಡಗಳು ಕಿವಿಯಾಗುತ್ತವೆ. ಸಂಜೆ ಏಳಾಗುತ್ತಿದ್ದಂತೆ ಜನ ಸಂದಣಿ ಕ್ರಮೇಣ ಕರಗಿ
ಪಾರ್ಕಿನಲ್ಲಿ ನೀರವ ಮೌನ ಆವರಿಸಿಕೊಳ್ಳುತ್ತದೆ. ಹಾಗೆಂದು ಈಗ ಪಾರ್ಕು ಬಿಡುವಾಯಿತೆಂದುಕೊಳ್ಳಬೇಡಿ! ದೂರದೂರಿಂದ ಹೊರಟು ಸೇರಬೇಕಾದ ಸ್ಠಳ ಸೇರಲಾಗದವರಿಗೆ; ದಿನವಿಡೀ ಅಲೆದು ದಣಿದ ಭಿಕ್ಷುಕರಿಗೆ ಆ ರಾತ್ರಿಯ ಸುಪ್ಪತ್ತಿಗೆಯಾಗುತ್ತದೆ ಪಾರ್ಕು.

ಷ್ಟಾದರೂ ಪಾರ್ಕಿನ ಗಿಡ ಮರಗಳ ದನಿಗೆ ಕಿವಿಯಾಗುವ ವ್ಯವಧಾನ ಪಾರ್ಕಿನ ಮಾಲಿಯಿಂದ ಹಿಡಿದು ನಿತ್ಯ ಬರುವ ವಯೋ ವೃಧ್ದರವರೆಗೆ ಯಾರೋಬ್ಬರಿಗೂ ಇಲ್ಲ! ಹಾಗಾಗಿ ಅಲ್ಲಿನ ಗಿಡಮರಗಳೆಲ್ಲ ಸದಾ ಎಲೆಯುದುರುವ ಕಾಲದ ಪ್ರತೀಕ್ಷೆಯಲ್ಲಿರುತ್ತವೆ - ಬೇಡವಾದ ಗರ್ಭ ಹೊತ್ತ ದಿನ ತುಂಬದ ಬಸುರಿಯೊಬ್ಬಳು ಪ್ರಸವಕ್ಕೆ ನಿರೀಕ್ಷಿಸುವಂತೆ...!

ಭಾನುವಾರ, ಅಕ್ಟೋಬರ್ 12, 2008

ಜಟಕಾ ಕುದುರೆ ಹತ್ತಿ ದಸ್ರಾ ನೊಡುಮಾ....








'ಶೋಭಾ'ಯಮಾನ ದಸರಾ ಸುತ್ತ ....



ಮೆಲುಕು ಹಾಕುವಂತಹ ಹತ್ತಾರು ಸಿಹಿ ನೆನಪು ಹಾಗೂ ಕೆಲವಾರು ಕಹಿ ನೆನಪುಗಳೊಂದಿಗೆ ಈ ಬಾರಿಯ ದಸರಾಗೆ ತೆರೆ ಬಿದ್ದಿದೆ. ಮೊಟ್ಟಮೊದಲಿಗೆ ನೆಮ್ಮದಿಯ ನಿಟ್ಟುಸಿರಿಟ್ಟವರೆಂದರೆ ಪೋಲೀಸರು.! ಉಗ್ರರ ಧಾಳಿಯ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಇತಿಹಾಸದಲ್ಲೇ ಅತೀ ಎನ್ನುವಷ್ಟು ಪೋಲೀಸರು ನಿಯೋಜಿತರಾಗಿದ್ದರು.
ರಂಭದ ದಿನಗಳಲ್ಲಿ ದಸರಾ ಅಖಾಡ ಖಾಲಿ ಕಂಡುಬಂದರೂ ನಂತರ ಜನ ಪ್ರವಾಹದ ಹರಿವು ಜೋರಾಗಿತ್ತು. ದಸರಾ ಕಾರ್ಯಕ್ರಮ ಉಗ್ರರ ಹಿಟ್ ಲಿಸ್ಟಿನಲ್ಲಿದ್ದರೂ ಜನ ಹೆದರದೆ "ಜೈ ಚಾಮುಂಡಿ" ಎಂದು ಜಂಬೂ ಸವಾರಿ ನೋಡಲು ಜಮಾಯಿಸಿದ್ದರು.
ಮೆರವಣಿಗೆ ವೀಕ್ಷಿಸಲು ಪಾಸ್ ಗಿಟ್ಟಿಸಿದವರದ್ದು ಒಂದು ರೀತಿಯ ಗೋಳಾದರೆ ಪಾಸ್ ರಹಿತರು ಕೊನೆ ಕ್ಷಣಗಳವರೆಗೂ ಪಾಸ್ ಪಡೆಯಲು ಪರದಾಡಿ ಸೋತು ಹಿಂತಿರುಗಿದರು. ಈ ಬಾರಿ ಪಾಸ್ ವಿತರಣೆ ಮಿತಿಯಲ್ಲಿದ್ದ ಕಾರಣ ಈ ದ್ರುಷ್ಯ ಸಾಮಾನ್ಯವಾಗಿತ್ತು. ಆದ್ರೂ ನಕಲಿ ಪಾಸ್ ವೀರರಿಗೇನೂ ಇದರಿಂದ ಲಾಸ್ ಆಗಲಿಲ್ಲ. ಮುನ್ನಾ ದಿನದಂದೇ ಪರ ಊರಿನ "ಮಿಕ"ಗಳನ್ನು ಹುಡುಕಿ ನಕಲಿ ಪಾಸ್ ನೀಡಿ ಹಣ ಪೀಕಿ ಫೇರಿ ಕಿತ್ತಿದ್ದರು!! ಕೊನೆಯಲ್ಲಿ ಅಸಲಿ - ನಕಲಿ ಪಾಸುದಾರರನ್ನು ನಿಭಾಯಿಸುವಲ್ಲಿ ಪರದಾಡಿದವರು ಪೋಲೀಸರು.
ಸರಾ ಮೆರವಣಿಗೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಭಾಗವಹಿಸಿದ್ದ ಯುದ್ಧ ಟ್ಯಾಂಕರ್ ಗಳು, ತೇಜಸ್ ಯುದ್ಧ ವಿಮಾನ ಮೆರವಣಿಗೆಗೆ ಮೆರಗು ನೀಡಿದ್ದು ಬಿಟ್ಟರೆ ಬಹುತೇಕ ಸ್ತಬ್ಧ ಚಿತ್ರಗಳು ನಿರಾಸೆ ಹುಟ್ಟಿಸಿದವು. ಅಲಂಕೃತ ಅಂಬಾರಿಯನ್ನು ಹೊತ್ತ ಬಲರಾಮ ರೇವತಿ ಸರಳರೊಂದಿಗೆ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ. ಬೀಳುತ್ತಿದ್ದ ಬಿರು ಬಿಸಿಲನ್ನೂ ಲೆಕ್ಕಿಸದೆ ಜನ ಬೆಳಿಗಿನಿಂದಲೇ ಕಾದು ಕೂತು ಮೆರವಣಿಗೆ ನೋಡಿದರು.
ಜಂಬೂ ಸವಾರಿಗೂ ಮುಂಚಿನ ದಿನಗಳೂ ಕೂಡ ಕಾರ್ಯಕ್ರಮಗಳ ಭರಾಟೆ ಜೋರಾಗೇ ಇತ್ತು. ಈ ಬಾರಿಯ ಹೊಸ ಸೇರ್ಪಡೆಗಳೆನಿಸಿದ ರೈತ ದಸರಾ, ಗ್ರಾಮೀಣ ದಸರಾ ಹಾಗೂ ಜನಪದೋತ್ಸವಗಳು ಉತ್ತಮ ಆರಂಭವನ್ನು ಸೂಚಿಸಿದವು. ಗೋಲ್ಡ್ ಕಾರ್ಡ್ ಹೋಲ್ಡರ್ ಗಳಿಗೆ ಎಲ್ಲ ಕಾರ್ಯಕ್ರಮಗಳಿಗೂ ಸ್ಥಳ ಕಾಯ್ದಿರಿಸಲಾಗಿತ್ತಾದರೂ ಯಾವುದಕ್ಕೆ ಹೋಗಬೇಕೆಂಬ ಗೋಜಲಿನಿಂದ ಕೊನೆಗೆ ಖಾಲಿ ಉಳಿದದ್ದು ಅರಮನೆ ಮುಂಭಾಗದ ಖುರ್ಚಿಗಳು.!!
ಳೆದ ಬಾರಿ ವರುಣನ ಮುನಿಸಿನಿಂದ ಮಸುಕಾಗಿದ್ದ 'ಏರ್ ಷೋ' ಈ ಬಾರಿ ಸಾಂಗವಾಗಿ ನಡೆಯಿತು.ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿಕ್ಕಿ ಮೆರೆಯುತ್ತಿದ್ದ ಯುವದಸರಾ ಕಾರ್ಯಕ್ರಮಕ್ಕೆ ಸ್ವಲ್ಪ ಅಂಕುಶ ಬಿದ್ದಿತ್ತಾದರೂ "ಯುವಶಕ್ತಿ"(!) ಅದರಿಂದ ನಿರಾಶರಾಗಲಿಲ್ಲ. ಯುವ ದಸರಾದಲ್ಲಿ ಶಿವಮಣಿಯ ಡ್ರಮ್ಸ್; ರಾಜೇಶ್ ಕೃಷ್ಣನ್ ಸಾಂಗ್ಸ್ ಮೋಡಿಗೆ ಮರುಳಾದ ಪೋಲೀಸರೂ "ಈ ಯುನಿಫಾರ್ಮ್ ಇಲ್ದಿದ್ರೆ ನಾವೂ ನಾಲ್ಕು ಸ್ಟೆಪ್ ಹಾಕ್ಬಹುದಿತ್ರೀ" ಎಂದು ಮರುಗಿದರು!
ತರೆಡೆ ನೆಡೆದ ಸಂಗೀತ, ಭರತನಾಟ್ಯಗಳಂತಹ ಕಾರ್ಯಕ್ರಮಗಳಿಗೆ ಒಂದು ವರ್ಗದ ಪ್ರೇಕ್ಷಕರ ಹಾಜರಾತಿ ಮಾತ್ರ ಇತ್ತು. ರಂಗಾಯಣದಲ್ಲಿ ನಡೆದ ನವರಾತ್ರಿ ರಂಗೋತ್ಸವದಲ್ಲಿ ವೈವಿಧ್ಯಮಯ ನಾಟಕಗಳು ಪ್ರದರ್ಶಿಸಲ್ಪಟ್ಟವಾದರೂ; ಎರಡನೆ ಪ್ರದರ್ಶನದಲ್ಲಿ ನಟರು ಜೋಷ್ ಕಳೆದುಕೊಂಡವರಂತೆ ಕಂಡುಬಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಶೋಭಾ ಕರಂದ್ಲಾಜೆ ಆರಂಭದಲ್ಲಿ ಸಿದ್ಧತೆಗಳನ್ನು ಉದ್ಯಾನ ನಗರಿಯಲ್ಲಿಯೇ ಪ್ರಾರಂಭಿಸಿದರಾದರೂ ವ್ಯವಸ್ಥೆ ಹದಗೆಡುತ್ತಿರುವುದನ್ನು ಮನಗಂಡು ಅರಮನೆ ನಗರಿಯಲ್ಲಿಯೇ ಮೊಕ್ಕಾಂ ಮಾಡಿ ಅಧಿಕಾರಿಗಳಿಂದ ಕೆಲಸ ತೆಗೆಸಿದರು. ಇಲ್ಲದಿದ್ದರೆ ಅವ್ಯವಸ್ಥೆ ಮೇರೆ ಮೀರುತ್ತಿತ್ತು. ದಸರಾದುದ್ದಕ್ಕೂ ಸಚಿವರ ಮಿಂಚಿನ ಸಂಚಾರ ಅಧಿಕಾರಿಗಳಲ್ಲಿ ಚುರುಕು ಮೂಡಿಸಿ ಕೆಲಸಗಳು ಸಾಂಗವಾಗಿ ನಡೆಯುವಂತಾಯಿತು. ಅಷ್ಟಾಗಿಯೂ ಕೆಲವರು ಒಲ್ಲದ ಗಂಡಂದಿರಾಗಿ ಮೊಸರಲ್ಲಿ ಕಲ್ಲು ಹುಡುಕಿದರು. ಒಟ್ಟಾರೆಯಾಗಿ ದಸರಾ ಅಚ್ಚುಕಟ್ಟಾಗಿ ನಡೆಯಿತು. ದೇಶ ವಿದೇಶಗಳಿಂದ ಬಂದವರು ದಿಲ್ ಖುಷ್ ಆದರು. ಮೈಸೂರಿನವ್ರಾಗಿದ್ದೂ 'ನಾನಾ ಕಾರಣ'ಗಳಿಂದ ದಸರಾ ತಪ್ಪಿಸಿಕೊಂಡವರು ಮರುದಿನ ಎದ್ದು ಮರುಗಿದರು..!!!!
ಚಿತ್ರ ಕೃಪೆ: ಇಂಟರ್ನೆಟ್.