ಬುಧವಾರ, ಮಾರ್ಚ್ 25, 2009

ಸುಶಿಕ್ಷಿತನ ಸಣ್ಣತನ

ತ್ತೀಚೆಗೆ ಬೆಂಗಳೂರಿಗೆ ಹೋಗಿದ್ದಾಗ ನಡೆದ ಘಟನೆ. ಸಿಟಿ ಬಸ್ಸಿಗೆ ಕಾಯುತ್ತ ಬಸ್ ನಿಲ್ದಾಣದಲ್ಲಿ ನಿಂತಿದ್ದೆ. ಸಮೀಪವೇ ಇದ್ದ ಸಣ್ಣ ಮೈದಾನದಲ್ಲಿ ಮಕ್ಕಳ ಗುಂಪೊಂದು ಕ್ರಿಕೆಟ್ ಆಡುತ್ತಿತ್ತು. ಒಬ್ಬಾತ ಜೋರಾಗಿ ಹೊಡೆದಾಗ ಬಾಲು ಮೈದಾನವನ್ನು ದಾಟಿ ನನ್ನ ಪಕ್ಕ ನಿಂತಿದ್ದ ಯುವಕನ ಬಳಿ ಬಂದು ಬಿದ್ದಿತು. ಇದನ್ನು ನೋಡಿದ ಮಕ್ಕಳು ಬಾಲ್ ಪಡೆಯಲು ಓಡೋಡಿ ಬಂದವು.

ಷ್ಟರಲ್ಲಿ ನಾನು ಹತ್ತಬೇಕಿದ್ದ ಬಸ್ ಬಂದಿದ್ದರಿಂದ ನನ್ನ ಗಮನ ಅತ್ತಕಡೆ ಹರಿಯಿತು. ಸುಶಿಕ್ಷಿತನಂತೆ ಕಾಣುತ್ತಿದ್ದ ಆ ಯುವಕ ಅದಾಗಲೇ ಬಾಲ್ ಎತ್ತಿಕೊಂಡವನು ಮಕ್ಕಳಿಗೆ ಅದನ್ನು ಹಿಂದಿರುಗಿಸದೆ ಮುಷ್ಟಿಯಲ್ಲಿ ಹಿಡಿದುಕೊಂಡು ಬಸ್ಸೇರಿ ಕುಳಿತುಕೊಂಡಿದ್ದ. ಮಕ್ಕಳು ಬಸ್ ಬಳಿ ಬಂದು ಬಾಲ್ ನೀಡುವಂತೆ ಅಂಗಲಾಚತೊಡಗಿದರು. ಆದರೂ ಈತ ತನಗೇನೂ ಗೊತ್ತಿಲ್ಲವೆಂಬಂತೆ ಮಿಣ್ಣಗೆ ಕುಳಿತುಕೊಂಡಿದ್ದ. ಬಾಲ್ ಇವನ ಬಳಿಯೇ ಇದೆ ಎಂದು ಗೊತ್ತಾಗಿದ್ದ ಆ ಮಕ್ಕಳ ಮುಖ ಅಸಹಾಯಕತೆಯಿಂದ ಕ್ಷಣಕ್ಷಣಕ್ಕೂ ಸಣ್ಣದಾಗತೊಡಗಿತು.

ದನ್ನು ನೋಡಿದ ನಾವೆಲ್ಲ ಆ ಯುವಕನತ್ತ ಇರಿಯುವ ನೋಟ ಬೀರಿದರೂ ಆತನ ಆನೆ ಚರ್ಮಕ್ಕೆ ಅದು ನಾಟಲೇ ಇಲ್ಲ! ಬಸ್ಸಿನಲ್ಲಿದ್ದ ಹಿರಿಯರೊಬ್ಬರು ಮನಸ್ಸು ತಡೆಯಲಾರದೆ ‘ಪಾಪ ಆ ಮಕ್ಕಳ ಚೆಂಡನ್ನು ಯಾಕೆ ಕಿತ್ಕೋತೀರ್ರೀ; ವಾಪಸ್ ಕೊಡಿ.’ ಎಂದು ಹೇಳಿದರಾದರೂ ಆತ ಜಾಣ ಕಿವುಡನಂತೆ ಕಿಟಕಿಯತ್ತ ಮುಖ ಹೊರಳಿಸಿದ.

ಸ್ಸು ನಿಧಾನವಾಗಿ ಮುಂದೆ ಚಲಿಸಲಾರಂಭಿಸಿತು. ಮಕ್ಕಳು ಅಂಗಲಾಚುತ್ತಲೇ ಕೆಲ ಹೆಜ್ಜೆ ಹಿಂಬಾಲಿಸಿದರು. ಬಸ್ಸು ವೇಗ ಹೆಚ್ಚಿಸಿಕೊಂಡಂತೆ ನಿರಾಶೆಯ ನೋಟ ಬೀರುತ್ತ ಪೆಚ್ಚುಮೋರೆ ಹಾಕಿಕೊಂಡರು. ಯುವಕನ ಮುಖದಲ್ಲಿ ವಿಜಯ(?)ದ ವಿಕೃತ ಸಂತೋಷವೊಂದು ಹುಟ್ಟಿ ಮಾಯವಾಯಿತು.

ವಿದ್ಯಾವಂತರಾಗಿದ್ದೂ ಅಂಥ ಸಣ್ಣ ಮಕ್ಕಳು ಎಲ್ಲೆಲ್ಲಿಂದಲೋ ಪುಡಡಿಗಾಸು ಕಲೆ ಹಾಕಿ ಆಡಲು ಕೊಂಡುಕೊಂಡಿರುವ ಬಾಲನ್ನೇ ಕಿತ್ತುಕೊಳ್ಳುವ ಸಣ್ಣತನ ತೋರಿಸುವ ಇಂಥವರು ನಾಳೆ ತಮ್ಮ ಮಕ್ಕಳ ಬಾಲ್ಯವನ್ನು ಹೇಗೆ ಹಸನಾಗಿಸಿಯಾರು?

ಗುರುವಾರ, ಮಾರ್ಚ್ 12, 2009

ಕಥೆಯಲ್ಲದ ಕಥೆ

ಶ್ವಾನ ಸಂರಕ್ಷಣಾ ಸಂಘದ ಅಧ್ಯಕ್ಷ ನಾಗರಾಜ ಎಂದಿನಂತೆ ತನ್ನ ಫೀಲ್ಡ್ ವರ್ಕ್ ಮುಗಿಸಿ ಸಂಘದ ಕಚೇರಿಗೆ ವಾಪಸಾಗುತ್ತಿದ್ದ. ಸಂಘಕ್ಕೆ ಅಧ್ಯಕ್ಷನಾದಮೇಲೆ ಕೈಗೆತ್ತಿಕೊಂಡ ಮೊದಲ ಕೆಲಸದಲ್ಲೇ ಭಾರೀ ಯಶಸ್ಸು ಸಿಕ್ಕಿದ್ದ ಕಳೆ ಅವನ ಮುಖದಲ್ಲಿ ಎದ್ದುಕಾಣುತ್ತಿತ್ತು. ಬೀದಿ ನಾಯಿಗಳನ್ನು ಉಳಿಸಲು ತಾನು ಕೈಗೆತ್ತಿಕೊಂಡ ಚಳುವಳಿ ತಾರಕಕ್ಕೇರಿದ್ದು ಆತನಿಗೆ ವಿಪರೀತ ಸಂತಸ ತಂದಿತ್ತು. ನಗರದಲ್ಲಿ ಬೀದಿ ನಾಯಿಗಳ ಪರವಾಗಿ ಪೋಸ್ಟರ್ , ಕರಪತ್ರಗಳು ಯಥೇಚ್ಚವಾಗಿ ರಾರಾಜಿಸುತ್ತಿದ್ದವು.

ನಾಗರಾಜನ ಅದೃಷ್ಟವೋ, ಬೀದಿ ನಾಯಿಗಳ ಪುಣ್ಯವೋ ಕಾರ್ಪೋರೇಷನ್ ಸಿಬ್ಬಂದಿ ಬೀದಿ ನಾಯಿಗಳನ್ನು ಕೊಲ್ಲುವುದರ ವಿರುದ್ಧ ಈತ ಆರಂಭಿಸಿದ ಹೋ(ಹಾ)ರಾಟಕ್ಕೆ ಭಾರೀ ಬೆಂಬಲ ವ್ಯಕ್ತವಾಗುವ ಲಕ್ಷಣ ಕಾಣುತ್ತಿತ್ತು. ಬೀದಿ ನಾಯಿಗಳ ಕಾಟವನ್ನು ಅನುಭವಿಸಿ ಗೊತ್ತಿಲ್ಲದ, ಎತ್ತರದ ಕಾಂಪೋಡಿನ ಮನೆಗಳಲ್ಲಿ ಬೆಚ್ಚಗೆ ಕುಳಿತ ತಥಾಕಥಿತ ಸಮಾಜ ಸೇವಕರು ಈತನಿಗೆ ಕುಳಿತಲ್ಲಿಂದಲೇ ಬಿಸ್ಕೀಟು ಎಸೆದು ತಮ್ಮ ಬೇಳೆ ಬೇಯಿಸಿಕೊಳ್ಳಲು ಇವನನ್ನು ಛೂ ಬಿಡುತ್ತಿದ್ದರು. ಇದರಿಂದ ಹುರುಪುಗೊಂಡ ನಾಗರಾಜ ಶ್ವಾನೇಶ್ವರನೇ ಸಾಕ್ಷಾತ್ ಮೈಮೇಲೆ ಬಂದಂತೆ ಪಾಲಿಕೆ ಸಿಬ್ಬಂದಿಗಳ ಮೇಲೆ ಏರಿಹೋಗುತ್ತಿದ್ದ. ಅವರಿಗೆ ಬೀದಿ ನಾಯಿಗಳನ್ನು ಸುಧಾರಿಸುವುದಕ್ಕಿಂತ ಇವನನ್ನು ಸುಧಾರಿಸುವುದೇ ಯಮ ಕಷ್ಟವಾಗುತ್ತಿತ್ತು.

ವತ್ತೂ ಸಹ ನಗರದ ಬಡಾವಣೆಯೊಂದಕ್ಕೆ ತೆರಳಿ ಬೀದಿ ನಾಯಿಗಳ ಕುರಿತು ಅನುಕಂಪ ಭರಿತ ಭಾಷಣ ಕುಟ್ಟಿ ಬಂದಿದ್ದ. ಕಚೇರಿಗೆ ವಾಪಸಾಗುತ್ತಿದ್ದವನು ಮಾರ್ಗಮಧ್ಯದಲ್ಲಿ ಟಿ ಕುಡಿಯಲೆಂದು ಗಾಡಿ ನಿಲ್ಲಿಸಿದ. ಟೀಗೆ ಆರ್ಡರ್ ಮಾಡಿ ಸ್ಕೂಟರಿನಲ್ಲಿದ್ದ ಪೋಸ್ಟರೊಂದನ್ನು ತೆಗೆದು ಪಕ್ಕದ ಕಾಂಪೋಡಿಗೆ ಅಂಟಿಸುವಷ್ಟರಲ್ಲಿ ಟಿ ಬಂತು. ಭಾಷಣ ಬಿಗಿದ ರಭಸಕ್ಕೆ ಬೆಳಿಗ್ಗೆ ತಿಂದ ತಿಂಡಿ ಕರಗಿ ಕಾಣೆಯಾಗಿದ್ದರಿಂದ ಟಿ ಜೊತೆಗೆ ಎರಡು ಬನ್ಸ್ ತೆಗೆದುಕೊಡು ಟೀ ಹೀರತೊಡಗಿದ.

ದೇ ಹೊತ್ತಿಗೆ ಅಲ್ಲೇ ತಿಪ್ಪಿ ಕೆದರುತ್ತಿದ್ದ ಬಡಕಲು ಬೀದಿ ನಾಯಿಯೊಂದು ನಾಗರಾಜನ ಎದುರಿಗೆ ಪ್ರತ್ಯಕ್ಷವಾಯಿತು. ಮೈಯ ಎಲುಬು ಎಣಿಸಬಹುದಾದಷ್ಟು ಬಡಕಲಾಗಿದ್ದ ಆ ನಾಯಿ ಬನ್ಸ್ ತಿನ್ನುತ್ತಿರುವ ನಾಗರಾಜನನ್ನೇ ನೋಡುತ್ತ ಬಾಲ ಅಲ್ಲಾಡಿಸತೊಡಗಿತು. ಒಮ್ಮೆ ಅದರತ್ತ ದೃಷ್ಟಿ ಹಾಯಿಸಿದ ನಾಗರಾಜ ಕಂಡೂ ಕಾಣದವನಂತೆ ಪಕ್ಕಕ್ಕೆ ತಿರುಗಿ ಚಹಾ ಸೇವನೆ ಮುಂದುವರೆಸಿದ. ಅಷ್ಟರಲ್ಲಿ ಟೀ ಅಂಗಡಿಯವನು ಕುಳಿತಲ್ಲಿಂದಲೇ ಬನ್ನೊಂದನ್ನು ಎಸೆದ. ಒಂದೇ ಗುಕ್ಕಿಗೆ ನಾಯಿ ಅದನ್ನು ತಿಂದು ಮುಗಿಸಿತು. ಅದರ ಹಸಿವು ಹಿಂಗಲಿಲ್ಲವೇನೋ. ಮತ್ತೆ ನಾಗರಾಜನತ್ತ ತಿರುಗಿ ಆಸೆಯಿಂದ ಮಂದ್ರ ಸ್ವರದಲ್ಲಿ ಕುಂಯ್ ಕುಂಯ್ ರಾಗ ಹೊರಡಿಸಿತು.

ನೂ ಪ್ರಯೋಜನವಾಗಲಿಲ್ಲ. ನಾಗರಾಜನ ಕೈಲಿದ್ದ ಎರಡನೇ ಬನ್ಸೂ ಖಾಲಿಯಾಗುತ್ತಾ ಬಂತು.
ನಿರ್ಲಿಪ್ತ ಮೋರೆಯೊಡನೆ ಪಕ್ಕಕ್ಕೆ ತಿರುಗಿದ ನಾಯಿ ಅಲ್ಲಿ ಇಲ್ಲಿ ಮೂಸಿ ನಾಗರಾಜ ಅಂಟಿಸಿದ್ದ ಪೋಸ್ಟರಿಗೆ ಮೂತ್ರಿಸಿ ಹೊರಟುಹೋಯಿತು.

ನಾಗರಾಜನ ಮುಖ ಹರಳೆಣ್ಣೆ ಕುಡಿದಂತಾದರೂ ತೋರ್ಪಡಿಸಿಕೊಳ್ಳದೆ ಬಿಲ್ ಕೊಡಲು ಹೊರಳಿದ. ಆಗಲೇ ಅವನಿಗೆ ಟಿ ಅಂಗಡಿಯವ ಈಗ ನಡೆದ ಘಟನೆಗೆ ಮೂರನೇ ಪ್ರೇಕ್ಷಕನಾಗಿದ್ದನೆಂಬ ಅಂಶ ತಿಳಿದದ್ದು.!
ತಕ್ಷಣ ಸ್ಕೂಟರ್ ಏರಿದವನೇ ಶರವೇಗದಲ್ಲಿ ಅಲ್ಲಿಂದ ಕಾಲ್ಕಿತ್ತ. ಇತ್ತ ನಾಗರಾಜ ಅಂಟಿಸಿದ್ದ ಪೋಸ್ಟರ್ ನಿಧಾನವಾಗಿ ನೆಲಕ್ಕೊರಗಿತು.

ಮಂಗಳವಾರ, ಜನವರಿ 20, 2009

ಮಾಗಿ ಚಳಿಗೆ ಮೈಯೊಡ್ಡಿ

ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ 'ಮಡಿವಂತ' ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.


ಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.


ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.

ಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು.

ಬಾನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ.

ಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ.

ಹೀಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ 'ಅಪ್ಪಿಕೋ' ಚಳುವಳಿಗೆ ಮೀಸಲು.! ಮದುವೆಯಾಗದವರು 'ಒಂದು ಚಳಿಗಾಲ ವ್ಯರ್ಥವಾಯಿತಲ್ಲ' ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ!

ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ!

[ಟಿಪ್ಪಣಿ:ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ.
ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ 'ಪೇಷೆಂಟ್' ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.]


ಚಿತ್ರ ಕೃಪೆ: ಇಂಟರ್ನೆಟ್



ಶನಿವಾರ, ಜನವರಿ 3, 2009

"ದೊಡ್ಡ" ಬಜಾರಿನ ಟಿ (ಫ್ರೀ) ಶರಟು ಪ್ರಸಂಗವು

ದು "ಮಾಲ್"ಗಳ ರೇಸಿನಲ್ಲಿ ಮುಂಚೂಣಿಯಲ್ಲಿರುವ "ದೊಡ್ಡ"ಬಜಾರು. ದಸರಾ ಸಮಯದಲ್ಲಿ ಅರಮನೆ ನಗರಿಯಲ್ಲಿಯೂ ತನ್ನ ಖಾತೆ ತೆರೆದು ದೊಡ್ಡ ಮಟ್ಟದಲ್ಲೇ ಜನರನ್ನು ಸೆಳೆಯತೊಡಗಿತು. ಅದು ಆರಂಭವಾಗುವ ಮೊದಲೇ "ಹಾಗಂತೆ, ಹೀಗಂತೆ" ಎಂಬ ಅಂತೆ - ಕಂತೆಗಳ ಸಾಲು ಸಂತೆಯೇ ಹುಟ್ಟಿಕೊಂಡಿತ್ತು.

ದೀಪಾವಳಿ ಸಮಯದಲ್ಲಿ 2 ಶರಟು ಕೊಂಡರೆ 1 ಫ್ರೀ ಎಂಬ ಆಫರ್ ಘೋಷಣೆಯಾದಾಗ ನಾವೊಂದಿಷ್ಟು ಮಿತ್ರರು ಒಮ್ಮೆ ಆ 'ದೊಡ್ಡ' ಬಜಾರಿಗೆ ದಾಳಿಯಿಡುವ ಸ್ಕೆಚ್ ರೂಪಿಸಿದೆವು! ಆ ಪ್ರಕಾರ 3 ಜನರಂತೆ ಗುಂಪಿನಲ್ಲಿ ಶರಟು ಸೆಲೆಕ್ಟ್ ಮಾಡಿ ಖರೀದಿಸುವುದು. ನಂತರ ಒಟ್ಟು ಮೊತ್ತದಲ್ಲಿ ಷೇರ್ ಮಾಡಿಕೊಳ್ಳುವುದು ನಮ್ಮ ಯೋಜನೆಯಾಗಿತ್ತು. ಆಗ ಪ್ರತಿಯೊಬ್ಬರಿಗೂ 1 ಶರಟಿನ ಮೇಲೆ 50 - 60 ರೂ. ಉಳಿತಾಯವಾಗುತ್ತದೆಂಬ ಲೆಕ್ಕಾಚಾರ ನಮ್ಮದಾಗಿತ್ತು.

ಅಂತೆಯೇ ಒಂದು ದಿನ ಮುಹೂರ್ತ(!) ನಿಗದಿಪಡಿಸಿಕೊಂಡು ಬಜಾರ್ ಒಳಕ್ಕೆ ಪಾದಾರ್ಪಣೆ ಮಾಡಿದೆವು. ಅತ್ತಿತ್ತ ಕಣ್ಣು ಹಾಯಿಸದೆ ಸೀದಾ ಸಿದ್ಧ ಉಡುಪುಗಳ ವಿಭಾಗಕ್ಕೆ ಹೋದರೆ, ಅಲ್ಲಿನ ದೃಶ್ಯ ನಮ್ಮನ್ನು ದಂಗುಬಡಿಸಿತು. ಎಲ್ಲರೂ "ಆಯ್ಕಳಿ.. ತುಂಬ್ಕಳಿ" ಸಿದ್ದಾಂತವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು. ಒಬ್ಬೊಬ್ಬರ ಹೆಗಲಮೇಲೂ ನಾಲ್ಕಾರು ಶರಟು, ಕೈಯಲ್ಲಿ ನಾಲ್ಕಾರು ಪ್ಯಾಂಟು ರಾರಾಜಿಸುತ್ತಿದ್ದವು. ಅಷ್ಟಕ್ಕೇ ಮುಗಿಯಲಿಲ್ಲ,: ಎದುರಿಗಿದ್ದ ತಳ್ಳುಗಾಡಿಯೊಳಗೂ ಹತ್ತಾರು ಶರ್ಟು, ಪ್ಯಾಂಟುಗಳನ್ನು ತುಂಬಿಕೊಂಡಿದ್ದರು. ಇದನ್ನು ನೋಡಿದ ನಮಗೆ ಅವನೇನು ತನಗೆ ಬಟ್ಟೆ ಕೊಂಡಿದ್ದಾನೋ ಅಥವಾ ಮತ್ತೆಲ್ಲೋ ಹೋಗಿ ರಿಟೇಲ್ ಷಾಪ್ ತೆರೆಯುತ್ತಾನೋ ಎಂಬುದು ಅರ್ಥವಾಗಲಿಲ್ಲ!

ಮಯ ವ್ಯರ್ಥಮಾಡದೆ ನಾವೂ ಶರಟು ಆಯ್ಕೆ ಮಾಡುವತ್ತ ಗಮನಹರಿಸಿದೆವು. ಒಂದು ಗಂಟೆ ಹುಡುಕಿದರೂ ನಮಗೆ ಸರಿಹೊಂದುವ ಶರಟು ಸಿಗಲಿಲ್ಲ. ಸಿಕ್ಕ ಶರಟು ಗಳಲ್ಲವೂ ಮಿಂಚಿಂಗ್ ಪೌಡರ್, ಬಿಂಗು ಇತ್ಯಾದಿಗಳನ್ನು ಅಂಟಿಸಿ ಮಾಡಿದ ಡಿಸೈನ್ ನಿಂದ ಝಗಮಗಿಸುತ್ತಿದ್ದವು. ಅದನ್ನು

ಧರಿಸಿ ಕನ್ನಡಿ ನೋಡಿದರೆ ನಾವೇ ಒಂದು ನಡೆದಾಡುವ ಫ್ಯಾನ್ಸಿಸ್ಟೋರಿನಂತೆ ಕಾಣುತ್ತಿದ್ದೆವು! ಇನ್ನು ಕೆಲವು ಶರಟುಗಳ ಮೇಲೆ ಎ ಬಿ ಸಿ ಡಿ ಆದಿಯಾಗಿ ಎಲ್ಲ ಲಿಪಿಗಳೂ ಇದ್ದವು.

ಹೀಗೆ ನಮ್ಮ ಶರಟು ಟ್ರಯಲ್ ನೋಡುವ ಭರಾಟೆ ನೋಡಿದ ಸೆಕ್ಯುರಿಟಿಯವರಿಗೆ ಬಹುಶಃ ನಾವು ಅನುಮಾನಾಸ್ಪದ ವ್ಯಕ್ತಿಗಗಳಂತೆ ಕಾಣಿಸಿರಬೇಕು. ಒಂದೆರಡುಬಾರಿ ನಮ್ಮ ಸುತ್ತಮುತ್ತ ಸುಳಿದಾಡಿದರು! ಅಂತೂ ಎರಡು ಗಂಟೆ ಜಾಲಾಡಿ ಮೂವರೂ ಇದ್ದುದರಲ್ಲೇ ಸ್ವಲ್ಪ ಪರವಾಗಿಲ್ಲ ಎಂಬಂತಹ ಶರಟುಗಳನ್ನು ಆಯ್ಕೆ ಮಾಡಿಕೊಂಡು ಬಿಲ್ ಕೌಂಟರ್ ಬಳಿ ಹೋದೆವು.

ಗಲೇ ನಮಗೆ ಗೊತ್ತಾಗಿದ್ದು ನಮ್ಮ ಸ್ಕೆಚ್ ಫ್ಲಾಪ್ ಆಗಿದೆ ಎಂಬ ವಿಚಾರ. 250ರೂ.ಗಿಂತ ಹೆಚ್ಚಿನ ಬೆಲೆಯ 2 ಶರಟು ಕೊಂಡಾಗ ಮಾತ್ರ 1 ಶರಟು ಫ್ರೀ ಕೊಡುವುದು ಎಂದು ಕೌಂಟರಿನವ ಹೇಳಿದ. ಅರೆ ಕ್ಷಣ ನನ್ನ ಮಿತ್ರನತ್ತ ನೋಡಿದೆ. ನನಗೇನಾದರೂ ಶಾಪ ಕೊಡುವ ಶಕ್ತಿ ಇದ್ದಿದ್ದರೆ ಈ ಸ್ಕೆಚ್ ಹಾಕಿದ ಅವ ಕ್ಷಣದಲ್ಲೇ ಬೂದಿಯಾಗಿರುತ್ತಿದ್ದ.! ಆದರೂ ಕೌಂಟರಿನವನೊಡನೆ ಸ್ವಲ್ಪ "ಮಾತುಕತೆ" ನಡೆಯಿತು. 'ನೀವು ಸೇಲ್ಸ್ ಮ್ಯಾನ್ ಬಳಿ ಕೇಳಿ ತೆಗೆದುಕೊಳ್ಳಬೇಕಿತ್ತು' ಎಂದಿದ್ದಕ್ಕೆ ಆತನಿಗೆ ಸಣ್ಣ ಮಟ್ಟದ 'ಮಂಗಳಾರತಿ'ಯೂ ಆಯಿತು.

ಮ್ಮ ಸ್ಕೆಚ್ಚು ಫ್ಲಾಪ್ ಆಗಿದ್ದು ಸ್ವಲ್ಪ ಬೇಸರ ತಂದಿತಾದರೂ ಹೇಗೂ ಹಬ್ಬಕ್ಕೆ ಒಂದು ಶರಟು ಕೊಳ್ಳಬೇಕಾಗಿದ್ದರಿಂದ ಮೂವರೂ ಶರಟು ಕೊಂಡು ವಾಪಸಾದೆವು.



ಚಿತ್ರ ಕೃಪೆ: ಇಂಟರ್ನೆಟ್