ಮಂಗಳವಾರ, ಜನವರಿ 20, 2009

ಮಾಗಿ ಚಳಿಗೆ ಮೈಯೊಡ್ಡಿ

ಮಾಗಿ ಚಳಿ ಮತ್ತೆ ಮೈ ಸೆಟೆದುಕೊಂಡು ಎದ್ದು ನಿಂತಿದೆ. ಬೀಸುವ ಕುಳರ್ಗಾಳಿ ಚರ್ಮದ ಒಳ ಹೊಕ್ಕು ಬೆನ್ನುಹುರಿಯ ಆಳದಿಂದ ನಡುಕ ಹುಟ್ಟಿಸುತ್ತಿದೆ. ಮಹಾ 'ಮಡಿವಂತ' ಮನಸು ಕೂಡ ಬೆಳ್ಳಂಬೆಳಿಗ್ಗೆಯ ಹಬೆ ಕಾಫಿಗೆ ಕೈ ಚಾಚುತ್ತದೆ.


ಳೆಯಂತೆ ಚಳಿಗೂ ಸಹ ಅದರದೇ ಸೊಗಸಿದೆ. ಅದನ್ನು ನೀವು ಇಲ್ಲಿ, ನಗರದಲ್ಲಿ ಕೂತು ಕಾಣುವುದು ಸಾಧ್ಯವಿಲ್ಲ. ಇಲ್ಲಿ ಹೆಚ್ಚೆಂದರೆ ಉಲನ್ ಟೋಪಿ, ಮಫ್ಲರ್ ಧರಿಸಿ ಹಾಲು, ಪೇಪರ್ ಹಾಕುವವರನ್ನು ನೋಡಿಯೋ; ಕಣ್ಣೆರಡು ಬಿಟ್ಟು ಇಡೀ ದೇಹವನ್ನು ಅಮ್ಮಂದಿರು ಸುತ್ತಿದ ಮಫ್ಲರಿನಲ್ಲಿ ಮುಚ್ಚಿಕೊಂಡು ಹಿಂಸೆಪಡುತ್ತ ಓಡಾಡುವ ಷೋಕೇಸ್ ಬೇಬಿಗಳನ್ನು ನೋಡಿಯೋ ಚಳಿಗಾಲವನ್ನು ನೆನಪಿಸಿಕೊಳ್ಳಬೇಕು.


ನೀವು ಚಳಿಗಾಲದ ಛಳಕು, ಸೊಗಸು ಸವಿಯಬೇಕೆಂದರೆ ಮಲೆನಾಡಿಗೇ ಹೋಗಬೇಕು. ಅದರಲ್ಲೂ ತೋಟ, ಗದ್ದೆಗಳಿಂದ ಸುತ್ತುವರಿದ ಮನೆಯಾಗಿಬಿಟ್ಟರಂತೂ ನಿಮಗೆ ಚಳಿಯ ದಿವ್ಯದರ್ಶನವಾಗುವುದು ಖಂಡಿತ. ದೀಪಾವಳಿ ಮುಗಿಯುವುದೇ ಗಡಿ. ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ. ನವೆಂಬರ್ ಮುಗಿದು ಡಿಸೆಂಬರ್ ಕಾಲಿಡುತ್ತಿದ್ದಂತೆ ಮೈ ಕೊಡವಿ ಮೇಲೇಳುವ ಚಳಿ ಪೂರ್ತಿ ಬಿಡುವುದು ಶಿವರಾತ್ರಿ ಹೊತ್ತಿಗೆ. "ಶಿವರಾತ್ರಿ ಬಂದಾಗ ಶಿವ ಶಿವಾ.... ಅನ್ನುತ್ತ ಚಳಿ ಓಡಿಹೋಗುತ್ತೆ" ಅನ್ನೋ ಮಾತು ಮಲೆನಾಡಿನ ಹಳಬರ ಬಾಯಲ್ಲಿ ಇಂದಿಗೂ ಪ್ರಚಲಿತ.

ಲೆನಾಡಿನ ಚಳಿಗಾಲದ ಮುಂಜಾವು, ಮುಸ್ಸಂಜೆ - ಎರಡೂ ರಮಣೀಯವೇ. ನಸುಕಿನಲ್ಲೇ ಎದ್ದು ಗದ್ದೆಯ ಬದುವಿನ ಮೇಲೆ ನಡೆಯುತ್ತಾ, ಹುಲ್ಲುಹಾಸಿನ ಮೇಲೆ ಬಿದ್ದಿರುವ ಮಂಜಿನ ಹನಿಗಳನ್ನು ತುಳಿಯುತ್ತಾ ನಡೆಯುತ್ತಿದ್ದರೆ ಅಂಗಾಲಿನಿಂದ ನೆತ್ತಿಯವರೆಗೂ ಅವ್ಯಕ್ತ ರೋಮಾಂಚನ! ಅದೃಷ್ಟವಿದ್ದರೆ ಕಟಾವು ಮಾಡಿದ ಗದ್ದೆಗಳಲ್ಲಿ ಮೇಯುತ್ತಿರುವ ನವಿಲುಗಳ ದರ್ಶನಭಾಗ್ಯವೂ ಲಭ್ಯ. ಬಿದ್ದ ಇಬ್ಬನಿಯ ಭಾರ ಕಳೆದು
ಕೊಳ್ಳಲು ಅವು ಉದುರಿಸಿದ ರೇಷ್ಮೆ ನುಣುಪಿನ ನವಿಲುಗರಿಗಳು ಸಿಕ್ಕಲೂಬಹುದು.

ಬಾನಲ್ಲಿ ಬೆಳ್ಳಿ ಕಿರಣ ಮೂಡುತ್ತಿದ್ದಂತೆ ಅಡಿಕೆ ತೋಟಕ್ಕೆ ಹೋದರೆ ಬರಲೋ ಬೇಡವೋ ಎಂಬಂತೆ ಅಡಿಕೆ ಮರದ ಸಂದುಗಳಿಂದ ಇಣುಕುವ ಸೂರ್ಯನನ್ನು ನೋಡುವುದೇ ಚಂದ.ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ. ಬೆಳಗಿನ ತಿರುಗಾಟ, ತಿಂಡಿ ಮುಗಿಸಿ ಹಬೆಯಾಡುವ ಕಾಫಿ ಹೀರುತ್ತ ಅಂಗಳದಲ್ಲಿ ಕೂತು ಬಿಸಿಲಿಗೆ ಬೆನ್ನೊಡ್ಡಿದರೆ ಆಹಾ ಮಹದಾನಂದಂ!! ಗಂಟೆ ಹನ್ನೊಂದಾದರೂ ಬಿಸಿಲೇರಿದ್ದೇ ತಿಳಿಯುವುದಿಲ್ಲ.

ಳಿಗಾಲದಲ್ಲಿ ಸಂಜೆ ನಾಲ್ಕಕ್ಕೇ ಬಿಸಿಲು ತಾಪ ಕಳೆದುಕೊಂಡು ತಣ್ಣಗಾಗಿಬಿಡುತ್ತದೆ. ಮೂರುಸಂಜೆಯಾಗುತ್ತಿದ್ದಂತೆ ಬೀಸುವ ಕುಳಿರ್ಗಾಳಿ ಕೈಕಾಲು ತಣ್ಣಗಾಗಿಸಿಬಿಡುತ್ತದೆ. ಆಗ ಕಾವೇರಿಸಲು ಹೊಡಸಲು ಬೆಂಕಿಯೇ ಬೇಕು. ಅಡಿಕೆ ಕೊಯ್ಲು ಈ ಸಮಯದಲ್ಲೇ ನಡೆಯುವುದರಿಂದ ಅಡಿಕೆ ಒಲೆಯ ಬೆಂಕಿಯಲ್ಲಿ ಮೈ ಕಾಯಿಸುವುದೂ ಹಿತವಾಗಿರುತ್ತದೆ. ಅಡಿಕೆ ಒಲೆಯ ಮುಂದೆ ಕೂತು ಅಡಿಕೆ ಸುಲಿಯುವವರು ಹೇಳುವ ಹಾಡು, ಲಾವಣಿ, ತರಹೇವಾರಿ ಕಥೆಗಳನ್ನು ಕೇಳುತ್ತಿದ್ದರೆ ಸಮಯ ತಡರಾತ್ರಿ ತಲುಪಿದ್ದೇ ತಿಳಿಯುವುದಿಲ್ಲ.

ಹೀಗೆ ಮಲೆನಾಡಿನ ಚಳಿಗಾಲದ ದಿನಚರಿ ಸೊಗಸಾಗಿ ಕಳೆಯುತ್ತದೆ. ಏನೇ ಘನಕಾರ್ಯವಿದ್ದರೂ ಚಳಿಗಾಲದಲ್ಲಿ ಮಲೆನಾಡು ರಾತ್ರಿ ಹತ್ತಕ್ಕೇ ದೀಪವಾರಿಸಿಕೊಂಡು ಸ್ತಬ್ಧವಾಗಿಬಿಡುತ್ತದೆ. ಆಮೇಲಿನ ಸಮಯವೇನಿದ್ದರೂ 'ಅಪ್ಪಿಕೋ' ಚಳುವಳಿಗೆ ಮೀಸಲು.! ಮದುವೆಯಾಗದವರು 'ಒಂದು ಚಳಿಗಾಲ ವ್ಯರ್ಥವಾಯಿತಲ್ಲ' ಎಂದು ಕೊರಗುವುದು ಮಾಮೂಲು. ಹಾಗಿರುತ್ತದೆ ಮಲೆ(ಳೆ)ನಾಡಿನ ಚಳಿಯ ಛಳಕು. ಜೀವನದಲ್ಲೊಮ್ಮೆ ಆ ಮಾಗಿ ಚಳಿಗೆ ಮೈ ಒಡ್ಡದಿದ್ದರೆ ಏನೋ ಕಳದುಕೊಂಡಂತೆ ಎಂಬುದು ಮಲೆನಾಡಿನ ಚಳಿಗಾಲ ಕಂಡವರ ಅಂಬೋಣ!

ಈ ಬಾರಿಯ ಚಳಿಗಾಲ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿಯಿದೆ!

[ಟಿಪ್ಪಣಿ:ಇದು ಪ್ರತಿ ವರ್ಷದ ಮಲೆನಾಡಿನ ಚಳಿಗಾಲದ ದಿನಚರಿ, ನನ್ನ ನಿಲುಕಿಗೆ ಸಿಕ್ಕಷ್ಟು ಚಳಿಯ ಛಳಕುಗಳನ್ನು ಇಲ್ಲಿ ಬರೆದಿದ್ದೇನೆ. ನಿಜಕ್ಕೂ ಮಲೆನಾಡಿನ ಚಳಿಗಾಲ ಅದ್ಭುತವಾಗಿರುತ್ತದೆ.
ಈ ಬಾರಿ ಜೋರು ಚಳಿಯಲ್ಲಿ ಊರಿನಲ್ಲೇ ಇದ್ದರೂ 'ಪೇಷೆಂಟ್' ಪಟ್ಟ ಹೊತ್ತುಕೊಂಡಿದ್ದ ಕಾರಣ ಅಮ್ಮನೆಂಬ ಸೆಕ್ಯುರಿಟಿ ಸೂಪರ್ವೈಸರ್ ಅಂಗಳಕ್ಕೇ ಕಾಲಿಡಲು ಬಿಡಲಿಲ್ಲ. ಕೈಗೆ ಬಂದ ತುತ್ತು ಬಾಯಿಗೆ ಬರದಹಾಗಾಯಿತು.]


ಚಿತ್ರ ಕೃಪೆ: ಇಂಟರ್ನೆಟ್



7 ಕಾಮೆಂಟ್‌ಗಳು:

Ashok Uchangi ಹೇಳಿದರು...

ಪ್ರಿಯ ರಾಘವೇಂದ್ರ.
ನಿಮ್ಮ ಬರಹಕ್ಕೆ ೫ ನಕ್ಷತ್ರಗಳು!ಚಳಿಗಾಲದ ಬೆಚ್ಚನೆಯ ಅನುಭವವನ್ನು ಚನ್ನಾಗಿ ಬರೆದಿದ್ದೀರಿ.
*ಮಲೆನಾಡಿನಲ್ಲಿ ಚಳಿಗಾಲದ ಬಿಸಿಲೆಂದರೆ ಬಂಗಾರಕ್ಕೆ ಸಮ.
*ಕಂಬಳಿ ಹೊದ್ದು ಕಟ್ಟೆ ತುದಿಯಲ್ಲಿ ಕೂರುವ ತಳವಾರನಂತೆ ಚಳಿ ಸದ್ದಿಲ್ಲದೆ ಮಲೆನಾಡಿಗೆ ಕಾಲಿಟ್ಟುಬಿಡುತ್ತದೆ.
ಈ ಸಾಲುಗಳು ಪರಿಣಾಮಕಾರಿಯಾಗಿವೆ.
ಧನ್ಯವಾದ
ಅಶೋಕ ಉಚ್ಚಂಗಿ
http://mysoremallige01.blogspot.com/

Ittigecement ಹೇಳಿದರು...

ರಾಘವೇಂದ್ರ...

ಎಷ್ಟು ಸೊಗಸಗಿ ಬರೆದಿದ್ದೀರಿ..!!

ಒಂದು ಸಾರಿ ಊರಿಗೆ ಹೋಗಿ..
ಛಳಿಯಲ್ಲಿ ...ಕಂಬಳಿ ಹೊದ್ದು ..
ಮಲಗಿ ಬಂದಂತಾಯಿತು...!!

ಮುಂಜಾನೆಯ.. ಛಳಿ ಬಿಸಿಲಿಗೆ ..
ಮೈಯೊಡ್ಡಿ ಅಡಕೆ ಹರಡುತ್ತಿದ್ದರೆ...!!


ರಾತ್ರಿ ಅಂಗಳದಲ್ಲಿ.. ಅಟ್ಟದ ಕೆಳಗೆ..
ದೊಡ್ಡ ಒಲೆಯ ಮುಂದೆ ..ಬೆಂಕಿಯಲ್ಲಿ ಛಳಿ ಕಾಯಿಸುತ್ತ...
ಅಜ್ಜಿಯ ಕಥೆ ಕೇಳುತ್ತ.. ಕುಳಿತರೆ...!!

ವಾವ್... !!

ರಾಘವೇಂದ್ರ...

ನನಗಾದ ಖುಷಿಗೆ ಹೇಳಲು ಶಬ್ಧಗಳಿಲ್ಲ...!

ಹಳೆಯ ನೆನಪು ಮಾಡಿಸಿದ್ದಕ್ಕೆ..
ವಂದನೆಗಳು....

ಚಿತ್ರಾ ಸಂತೋಷ್ ಹೇಳಿದರು...

ರಾಘವೇಂದ್ರ.....................
ಚೆನ್ನಾಗಿಯೇ ಬರೆದಿದ್ದೀಯಾ..ನಿಮ್ ಮಲೆನಾಡು ಮಾತ್ರವಲ್ಲ ನಮ್ ಕರಾವಳಿ ಕಡೆಯ ಚಳಿಯೂ ಅಷ್ಟೇ ಮುದ ನೀಡುತ್ತೆ ಗೊತ್ತಾ? ನಾವು ಕಾಲೇಜಿನಿಂದ ಕುಪ್ಪಳ್ಳಿಗೆ ಬಂದಿದ್ದು ಚಳಿಗಾಲದ ಸಮಯದಲ್ಲೇ.ಚೆನ್ನಾಗಿ ಬರೆದಿದ್ದಕ್ಕೆ ನನ್ನ ಹಾಟ್ಸಾಪ್ ಆಯಿತಾ..
-ಚಿತ್ರಾ

shivu.k ಹೇಳಿದರು...

ರಾಘವೇಂದ್ರ,

ತುಂಬಾ ಸೊಗಸಾದ ಲೇಖನ. ಈ ಚಳಿಗಾಲದಲ್ಲಿ ಕೆಮ್ಮಣ್ಣುಗುಂಡಿ ಗಿರಿಧಾಮಕ್ಕೆ, ಮೈಸೂರಿಗೆ, ಮತ್ತು ಎರಡು ದಿನಗಳ ಹಿಂದೆ ನಮ್ಮೂರಿಗೆ ಹೋಗಿ ನಿಮ್ಮ ಲೇಖನದ ಎಲ್ಲಾ ಚಳಕು ಪಲುಕುಗಳನ್ನು ಅನುಭವಿಸಿದ್ದೇನೆ...ಜೊತೆಗೊಂದಷ್ಟು ಫೋಟೊಗಳು ಮತ್ತು ಬರಹದ ಕನವರಿಕೆ... ಆದ ಕಾರಣ ನಿಮ್ಮ ಬ್ಲಾಗಿಗೆ ಬರಲು ತಡ. ಲೇಖನ ಓದಿದ ಮೇಲೆ ಅನುಭವಿಸಿದ್ದು ಮೆಲುಕು ಹಾಕಿದಂತಾಯಿತು....ಥ್ಯಾಂಕ್ಸ್.....

Karthik ಹೇಳಿದರು...

it was very practical...i liked it :-)

ಶ್ರೀನಿಧಿ.ಡಿ.ಎಸ್ ಹೇಳಿದರು...

chanda bareyutteri. koothu sumaru baragaLanna odide.

Sushrutha Dodderi ಹೇಳಿದರು...

ತುಂಬಾ ಚನಾಗ್ ಬರ್ದಿದೀರ..